
ಹೊಸನಗರ:ದೇವಸ್ಥಾನಗಳು ಧಾರ್ಮಿಕ ಕೇಂದ್ರದ ಜೊತೆಗೆ ಸಾಮಾಜಿಕ ಕೇಂದ್ರಗಳು ಆಗಿರಬೇಕು. ಹೆಚ್ಚು ಸಾಮಾಜಿಕ ಕಾರ್ಯಗಳು ನಡೆಸಿದಾಗ ಜನಸಾಮಾನ್ಯರಿಗೂ ಉಪಯೋಗವಾಗಿ ದೇವಾಲಯಗಳ ಮೇಲಿನ ಭಕ್ತಿ, ನಂಬಿಕೆ ಎರಡೂ ಹೆಚ್ಚುತ್ತವೆ ಎಂದು ತೀರ್ಥಹಳ್ಳಿಯ ಬಾಳಗಾರು ಮಠದ ಕಿರಿಯ ಪೀಠಾಧಿಪತಿಗಳಾದ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥ ಶ್ರೀಪಾದರು ಹೇಳಿದರು.
ಕಾರಣಗಿರಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಭಾನುವಾರ ನಡೆದ 34 ನೇ ವರ್ಷದ ಸಹಸ್ರಾಧಿಕ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಗ್ರಾಮಭಾರತಿ ಟ್ರಸ್ಟ್ ಮತ್ತು ರಾಷ್ಟ್ರೋತ್ಥಾನ ಬಳಗದ ಆಶ್ರಯದಲ್ಲಿ ನಡೆದ ಸಾಮರಸ್ಯ ಸಮಾರಂಭ ಮತ್ತು ಅದಮ್ಯ ಚೇತನ ಪ್ರಾಯೋಜಿತ ಅನಂತ ಪ್ಲೇಟ್ ಬ್ಯಾಂಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಿನೇಶ್ ಜೋಷಿ ಫೌಂಡೇಶನ್ ಸಂಸ್ಥಾಪಕ ಅಬಸೆ ದಿನೇಶ್ ಜೋಷಿ ಮಾತನಾಡಿ ಸಮಾಜದಲ್ಲಿ ಸಂಘಟನೆ ಅತೀ ಮುಖ್ಯ. ಸಾಮರಸ್ಯದಿಂದ ಬಲಿಷ್ಠ ಭಾರತ ನಿರ್ಮಾಣ ಮಾಡಬಹುದೆಂದು ಅವರು ಹೇಳಿದರು.
ಮನಸಂ ಸೀನಿಯರ್ ಲಿವಿಂಗ್ ನ ಅನಂತರಾಮ್ ವರಯೂರು ಮಾತನಾಡಿ ಭಾರತ ವಿಶ್ವಗುರುವಾಗಲು ಸಾಮರಸ್ಯ ದಿಂದ ಬಾಳಿದರೆ ಮಾತ್ರ ಸಾಧ್ಯ ಎಂದರು.
ರಾಷ್ಟ್ತ್ರೋತ್ತಾನ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯ ಬಸವನಗೌಡ ಮಾತನಾಡಿ ಪರಿಷತ್ತಿಗೆ 60 ವರ್ಷವಾದ ಹಿನ್ನೆಲೆಯಲ್ಲಿ ಕಾರಣಗಿರಿಯ ರಾಷ್ಟ್ರೋತ್ಥಾನ ಬಳಗ, ಒಂದು ವರ್ಷದ ಅವಧಿಯಲ್ಲಿ ನಡೆಸಿದ 60 ಕಾರ್ಯಕ್ರಮಗಳ ಕಾರ್ಯ ವೈಖರಿಕಂಡು ಶ್ಲಾಘಿಸಿದರು.
ಅಂತಾರಾಷ್ಟ್ರೀಯ ಕ್ರೀಡಾಪಟು ಸ್ವಾತಿ ರವಿ ಮತ್ತು ಕೃಷಿಕ ಸುಬ್ರಮಣ್ಯ ಭಂಡಾರಿ ಇವರನ್ನು ಸನ್ಮಾನಿಸಲಾಯಿತು. ಪರಾಭವ ಸಂವತ್ಸರದ ಪಾಕೆಟ್ ದಿನಚರಿಯನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಕ್ತದಾನ ಶಿಬಿರ ನಡೆಯಿತು.
ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಕಾರ್ಯದರ್ಶಿ ಶಮಂತ್ ನೆಲ್ಲುಂಡೆ ಪಾಲ್ಗೊಂಡಿದ್ದರು.
ಕಲಾಭಾರತಿ ತಂಡ ಪ್ರಾರ್ಥಿಸಿ, ಹನಿಯ ರವಿ ಸ್ವಾಗತಿಸಿ, ವಿನಾಯಕ ಪ್ರಭು ವಂದಿಸಿದರು.
2 ದಿನಗಳ ಕಾರ್ಯಕ್ರಮದಲ್ಲಿ ಗಣಪತಿ ಉಪನಿಷದ್ ಹವನ, ಸೂರ್ಯನಮಸ್ಕಾರ ಯಜ್ಞ, ಶತರುದ್ರಾಭಿಷೇಕ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಸಹಸ್ರಾಧಿಕ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆದವು.
KARANAGIRI..
