
ಹೊಸನಗರ: ನಮ್ಮ ಮಾತಿನ ಹಿಂದೆ ಮನಸ್ಸು ಸದಾ ಕೆಲಸ ಮಾಡುತ್ತಿರುತ್ತದೆ. ಮನಸ್ಸನ್ನು ಶಾಂತ ಹಾಗೂ ಹತೋಟಿಯಲ್ಲಿ ಇಟ್ಟುಕೊಂಡರೆ ಮಾತು ಉತ್ತಮವಾಗಿರುತ್ತದೆ ಎಂದು ತೀರ್ಥಹಳ್ಳಿ ತಾಲ್ಲೂಕು ಕೋಣಂದೂರು ಸಮೀಪದ ಮಳಲಿ ಮಠದ ಶ್ರೀ ಡಾ. ಗುರು ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ತಾಲ್ಲೂಕಿನ ಸೊನಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳಗಿ ಗ್ರಾಮದ ಶ್ರೀ ಈಶ್ವರ, ಬಸವಣ್ಣ ಹಾಗೂ ನಾಗದೇವತೆ ಪರಿವಾರ ದೇವರ ಹನ್ನೊಂದನೇ ವಾರ್ಷಿಕೋತ್ಸವ ಸಮಾರಂಭದ ಜನಜಾಗೃತಿ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿ ಭಕ್ತಾದಿಗಳಿಗೆ ಅವರು ಆಶಿರ್ವಚನ ನೀಡಿದರು.
ಮಾತು ಬೆಳ್ಳಿ - ಮೌನ ಬಂಗಾರ ಎಂಬ ಮಾತು ಸತ್ಯವಾದುದು. ಮಾತು ಮೌಲ್ಯದಿಂದ ಕೂಡಿದ್ದಾದರೆ ಯಾವುದೇ ತೊಂದರೆ ಆಗದು. ಅದೇ ಮಾತು ಬಿರುನುಡಿಯಾಗಿದ್ದಾರೆ ಪರಿಸ್ಥಿತಿ ಗಂಭೀರವಾಗುತ್ತದೆ. ಆದ್ದರಿಂದ ಸವಿನುಡಿ ಎಲ್ಲರ ಬದುಕಿಗೆ ನೆಮ್ಮದಿ ತರುತ್ತದೆಂದು ನುಡಿದರು.
ಅದೃಷ್ಟ ಎಂದರೆ ಅವಕಾಶವನ್ನು ಪಡೆಯುವುದು. ಬುದ್ದಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು. ಆದ್ದರಿಂದ ಸದಾವಕಾಶ, ಪ್ರತಿಯೊಬ್ಬರ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಸತೀಶ್ ಕೊಳಗಿ, ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಆಹಾರ ಸಂಸ್ಕರಣಾ ವಿಭಾಗದ ಎಂಎಸ್ಸಿ ವಿಭಾಗದಲ್ಲಿ ರ್ಯಾಂಕ್ ವಿಜೇತ ಸ್ಥಳೀಯ ವಿದ್ಯಾರ್ಥಿ ಗಗನ್ ಗೌಡ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಅಜಯಶಾಸ್ತ್ರಿ ಹಾಗೂ ಪ್ರವೀಣ್ ವೇದಘೋಷ ಮೊಳಗಿಸಿದರು. ಚಂದ್ರಕಲಾ ಪ್ರಾರ್ಥಿಸಿದರು. ಮೂರ್ತಿರಾವ್ ಸ್ವಾಗತಿಸಿದರು. ಕೆ.ಎಲ್.ಗಂಗಾಧರ್ ನಿರೂಪಿಸಿ, ಭೋಜರಾಜಶೆಟ್ರು ಪ್ರಾಸ್ತಾವಿಕ ನುಡಿದರು. ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಪೂರ್ಣಿಮಾ ಮೂರ್ತಿರಾವ್, ಹಿರಿಯರಾದ ಸದಾನಂದ ಶೆಟ್ರು, ಮಂಜುನಾಥ್ ಶೆಟ್ರು, ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಶೆಟ್ರು , ರಾಜಶೇಖರ್ ಗೌಡ್ರು, ಕೃಷ್ಣಮೂರ್ತಿ, ದಾಮೋದರ, ರಾಘವೇಂದ್ರ, ಗಂಗಾಧರ್ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.
KOLAGI TEMPLE...
Discover more from Prasarana news
Subscribe to get the latest posts sent to your email.
