
ಹೊಸನಗರ: ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಪಕ್ಷಾತೀತ ಜಾತ್ಯತೀತ ಬೆಂಬಲ ವ್ಯಕ್ತವಾಯಿತು ಹೋರಾಟದ ನೇತೃತ್ವ ವಹಿಸಿದ್ದ ಮೂಲೆಗದ್ದೆ ಶ್ರೀಗಳು ಸಭೆಯಲ್ಲಿ ಮಾತನಾಡಿ ಕತ್ತಲಕೂಪದಲ್ಲಿ ನಲುಗುತ್ತಿರುವ ಹೊಸನಗರಕ್ಕೆ ಹೊಸಬೆಳಕು ಬೇಕಾಗಿದೆ. ಜಾತಿ ಮತ, ಪಂಥ, ಧರ್ಮ, ರಾಜಕಾರಣ ಮೀರಿದ ಹೋರಾಟ ಬೇಕಾಗಿದೆ ಎಂದು ಹೇಳಿದರು.
ಪಟ್ಟಣದ ಗಾಯತ್ರಿ ಮಂದಿರದಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರದ ಪೂರ್ವಭಾವಿ ಸಭೆಯಲ್ಲಿ ನೂಲಿಗ್ಗೇರಿ ಗೆಳೆಯರ ಬಳಗ ಕೊಡುಗೆಯಾಗಿ ನೀಡಿದ ಹೋರಾಟದ ಲೋಗೋ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಇಂದಿನ ಪೂರ್ವಭಾವಿ ಸಭೆಯಲ್ಲಿ ಪಕ್ಷ ಬೇಧ ಮರೆತು ಎಲ್ಲರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ್ದು ಕ್ಷೇತ್ರದ ಮರುಸೃಷ್ಟಿಯ ಬಗ್ಗೆ ಹೊಸ ಭರವಸೆ ಮೂಡಿಸಿದೆ. ಇದೇ ಹುಮ್ಮಸ್ಸು ಹೋರಾಟದ ಮನೋಭಾವ ನಿರಂತರವಾಗಿರಬೇಕು ಎಂದರು.
ಹೊಸನಗರ ತಾಲೂಕು ಅವಕೃಪೆಗೆ ಒಳಗಾಗುತ್ತಿರುವುದು ಸತ್ಯ. ಇದಕ್ಕೆ ಸರ್ಕಾರ ಮಟ್ಟದಲ್ಲಿ ಹೋಗಿ ತನ್ನ ಪ್ರಭಾವ ಬಳಸಿ ಯೋಜನೆಯನ್ನು ತರಬಲ್ಲ ನಾಯಕತ್ವ ತರುವಲ್ಲಿ ಹೊಸನಗರ ವಿಫಲವಾಗಿದೆ. ಇಂದಿನ ಯುವಕರು ಮುಂಚೂಣಿಗೆ ಬರಬೇಕಿದೆ ನಿಮ್ಮ ಭವಿಷ್ಯಕ್ಕು ಕ್ಷೇತ್ರ ಬೇಕಾಗಿದೆ ಎಂದರು. ಹಿರಿಯ ರಾಜಕಾರಣಿ ಸ್ವಾಮಿರಾವ್ ನೇತೃತ್ವದಲ್ಲಿ ಜಿಲ್ಲಾ ಕೇಂದ್ರಕ್ಕೆ ಪಾದಯಾತ್ರೆಯ ದಿನಂಕಾವನ್ನು ಶೀಘ್ರ ನಿಗಧಿ ಮಾಡಲಾಗುವುದು ಎಂದರು.
ಶಾಸಕ ಬೇಳೂರು ಸಾಗರದ ಒಂದು ಭಾಗವಾಗಿ ಹೊಸನಗರವನ್ನು ಎರಡನೇ ಬಾರಿಗೆ ಪ್ರತಿನಿಧಿಸುತ್ತಿದ್ದೇನೆ. ಹೋರಾಟದಲ್ಲಿ ಭಾಗಿಯಾಗುವುದಷ್ಟೇ ಅಲ್ಲ, ಹೋರಾಟಕ್ಕೆ ಹಣದ ನೆರವು ಕೂಡ ನೀಡುತ್ತೇನೆ ಎಂದು ಭರವಸೆ ನೀಡಿದರು.
ಶಾಸಕ ಆರಗ ಜ್ಞಾನೇಂದ್ರ, ಹೊಸನಗರ ತಾಲೂಕಿಗೆ ಎಲ್ಲಾ ರೀತಿಯಿಂದಲೂ ಅನ್ಯಾಯಕ್ಕೆ ಒಳಗಾಗಿದೆ. ಕ್ಷೇತ್ರದ ಹೋರಾಟಕ್ಕೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತೇನೆ ಎಂದರು.
ಮಾಜಿ ಶಾಸಕ ಹರತಾಳು ಹಾಲಪ್ಪ, ಪಶ್ಚಿಮಘಟ್ಟ ಪ್ರದೇಶದ ಶಾಸಕರು, ಸಂಸದರು, ಸ್ವಾಮೀಜಿಗಳ ಸಹಕಾರ ಪಡೆಯಲು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹೋರಾಟ ರೂಪಿಸಲು ಮೂರು ಹಂತದ ಸಮಿತಿ ರಚಿಸುವುದು ಸೂಕ್ತ ಎಂದರು.
ಮತ ಬಹಿಷ್ಕಾರ ಮಾಡಿ:
ಸಭೆಯಲ್ಲಿ ಪಾಲ್ಗೊಂಡ ಬಹುತೇಕರು, ಯಾರು ಕೂಡ ನಮ್ಮ ಮಾತು ಕೇಳಲ್ಲ. ಹೊಸನಗರ ಯಾರಿಗೂ ಬೇಡವಾಗಿದೆ. ಇದಕ್ಕೆ ಮತ ಬಹಿಷ್ಕಾರ ಮಾಡುವುದೇ ಉತ್ತಮ ಎಂದು ಸುಪ್ರದೀಪ್ ನವೀನ್ ಆಕ್ರೋಶ ವ್ಯಕ್ತಪಡಿಸಿದಾಗ ಇಡೀ ಸಭೆ ಅನುಮೋದನೆ ಮಾಡಿತು. ಹೊಸನಗರ ಮಾಡಿದ ತ್ಯಾಗದ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿ ನಾಲ್ಕು ಹೋಬಳಿ ಒಳಗೊಂಡ ಹೊಸನಗರ ತಾಲೂಕನ್ನೇ ಕ್ಷೇತ್ರವಾಗಿಸಿ ಮಾನ್ಯತೆ ನೀಡಬೇಕು ಎಂಬ ಒಕ್ಕೊರಲ ಒತ್ತಾಯ ಕೇಳಿ ಬಂತು.
ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಶಾಸಕ ಬಿ.ಸ್ವಾಮಿರಾವ್, ಜಿ.ಡಿ.ನಾರಾಯಣಪ್ಪ ಪ್ರಮುಖರಾದ ತೀನಾ ಶ್ರೀನಿವಾಸ್, ಚಿದಂಬರ ಹೂವಿನಕೋಣೆ, ಕೆ.ಜಿ.ಪ್ರಶಾಂತ್, ಬಂಡಿ ರಾಮಚಂದ್ರ, ಎನ್.ಆರ್.ದೇವಾನಂದ್, ಆಲವಳ್ಳಿ ವೀರೇಶ್, ಈಶ್ವರಪ್ಪ ಗೌಡ, ಬಿ.ಜಿ.ಚಂದ್ರಮೌಳಿ, ಸುಬ್ರಹ್ಮಣ್ಯ ಮಾಸ್ತಿಕಟ್ಟೆ, ಹಾಲಗದ್ದೆ ಉಮೇಶ್, ಹಂಜಾ ರಿಪ್ಪನ್ಪೇಟೆ, ಕರುಣಾಕರ ಶೆಟ್ಟಿ, ವರ್ತೇಶ್ ರಿಪ್ಪನ್ಪೇಟೆ, ಎಂ.ಎನ್.ಸುಧಾಕರ್, ಸುಧೀಂದ್ರ ಪಂಡಿತ್ ವಿವಿಧ ಪಕ್ಷದ ಪ್ರಮುಖರು, ಹೋರಾಟಗಾರರು ಭಾಗವಹಿಸಿದ್ದರು.
CONSTITUENCY...
Discover more from Prasarana news
Subscribe to get the latest posts sent to your email.
