
ಹೊಸನಗರ: ಗ್ರಾಮಗಳ ಆಡಳಿತ ವ್ಯವಸ್ಥೆ ಚುನಾಯಿತ ಜನಪ್ರತಿನಿಧಿಗಳಿಂದ ದೂರವಾಗಿ ಹಲವು ತಿಂಗಳೇ ಸಂದಿವೆ. ಈಗ ಇಡೀ ವ್ಯವಸ್ಥೆ ಏನಿದ್ದರೂ ಆಡಳಿತಾಧಿಕಾರಿ ಕೈ ಸೇರಿದೆ. ಮಳೆಗಾಲ ಆರಂಭಗೊಂಡಿದೆ. ರಾಜ್ಯದಲ್ಲಿನ ನೂತನ ಮಂತ್ರಿ ಮಂಡಲದ ಆಡಳಿತ ಚುಕ್ಕಾಣಿ ಹಿಡಿದಿದೆ. ಆದರೂ, ಮಳೆಗಾಲಕ್ಕೆ ಮುನ್ನವೇ ಶಾಸಕರೂ ಸೇರಿದಂತೆ ಹಲವು ಜನಪ್ರತಿನಿಧಿಗಳಿಗೆ ತಮ್ಮ ಗ್ರಾಮ ಸಂಪರ್ಕ ರಸ್ತೆ ದುರಸ್ತಿಗೆ ಮನವಿ ಮಾಡಿದರೂ ಕವಿಗೊಡದ ಜನಪ್ರತಿನಿಧಿಗಳು, ಅಧಿಕಾರಿ ವರ್ಗಕ್ಕೆ ತಕ್ಕ ಪಾಠ ಕಲಿಸಲು ಯುವ ಉತ್ಸಾಹಿ ಯುವಕರು ಮುಂದಾದ ಪ್ರಸಂಗ ತಾಲೂಕಿನ ಕಸಬಾ ಹೋಬಳಿಯ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಳಿಕೊಪ್ಪ ಗ್ರಾಮದಲ್ಲಿ ನಡೆದ ಸಂಗತಿ ಈಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅರಳಿಕೊಪ್ಪ ಹಾಗೂ ಎಂ.ಗುಡ್ಡೇಕೊಪ್ಪ ಗ್ರಾಮದ ಬಸವಣ್ಣ ದೇವಸ್ಥಾನ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲ. ಈ ಭಾಗದಲ್ಲಿ ನೂರಾರು ಕೃಷಿ ಕೂಲಿ ಕಾರ್ಮಿಕ ವರ್ಗದವರೇ ಹೆಚ್ಚಾಗಿ ವಾಸಿಸುತ್ತಿದ್ದು, ಹತ್ತಾರು ಮಕ್ಕಳು ಶಾಲೆ ಕಾಲೇಜಿಗೆ ತೆರಳಲು ಅನಾನುಕೂಲವಾಗಿದೆ. ಅನಾರೋಗ್ಯ ಪೀಡಿದರೂ, ವಯೋವೃದ್ದರು ರಸ್ತೆಯಲ್ಲಿ ಸಂಚಾರ ಮಾಡುವುದೇ ಕಷ್ಟಸಾಧ್ಯ ಎನ್ನುವಂತಾಗಿದೆ. ಈ ಹಿನ್ನಲೆಯಲ್ಲಿ ಗ್ರಾಮ ಹಲವು ಸಮಾನ ಮನಸ್ಕ ಯುವಕರು ಒಗ್ಗೂಡಿ ತಾವೇ ಹೊಂಡ ಗುಂಡಿಗಳಿಂದ ತುಂಬಿ ಹೋಗಿದ್ದ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಟಿಪ್ಪರ್, ಟ್ಯಾಕ್ಟರ್ ನಂತ ಹಲವು ಭಾರೀ ವಾಹನಗಳನ್ನು ಬಳಸಿ ,ಗುಂಡಿಗಳಿಗೆ ಅಗತ್ಯ ಮಣ್ಣು, ಜಲ್ಲಿ ತುಂಬಿ ಮಳೆನೀರು ನಿಲ್ಲದಂತೆ ಹೊಂಡ ಗುಂಡಿ ಮುಚ್ಚುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ರಸ್ತೆ ದುರಸ್ತಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಶಾಸಕರ ಕ್ಷೇತ್ರಾಭಿವೃದ್ದಿ ನಿಧಿಯಿಂದ ರೂ 9.75 ಲಕ್ಷ ಅನುದಾನ ಮೀಸಲಿಟ್ಟರೂ ಕಾಮಗಾರಿ ಈ ವರೆಗೆ ಮರೀಚಿಕೆಯಾಗಿದೆ ಎಂಬುದು ಗ್ರಾಮಸ್ಥರ ದೂರಾಗಿದೆ. ಸುಮಾರು ಎರಡು ಕಿ.ಮಿ.ರಸ್ತೆ ದುರಸ್ತಿಗೆ ಮುಂದಾದ ಯುವಕರ ಕಾರ್ಯ ಆ ಭಾಗದ ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸ ಮೂಡಿಸಲು ಕಾರಣವಾಗಿದೆ.
ROAD REPAIR..
Discover more from Prasarana news
Subscribe to get the latest posts sent to your email.
