MEDICINE:ಕಳಪೆ ಔಷದ ಮಾರಾಟ ಆರೋಪ: ಯುವ ಕೃಷಿಕನಿಂದ ಕೃಷಿ ಇಲಾಖೆಗೆ ದೂರು..

ಹೊಸನಗರ:ಕಳಪೆ ಗುಣಮಟ್ಟ ಹಾಗೂ ತಪ್ಪು ಮಾಹಿತಿಯುಳ್ಳ ಶಿಲೀಂಧ್ರನಾಶಕ ಬಳಕೆಯಿಂದ ಅಡಿಕೆ ಬೆಳೆ ಹಾನಿಗೊಳಗಾಗಿದೆ ಎಂದು ಆರೋಪಿಸಿ ಹೊಸನಗರ ತಾಲೂಕಿನ ಪುಣಜೆ ಗ್ರಾಮದ ಕೃಷಿಕ ಅಭಿಲಾಷ್ ಅವರು ಕೃಷಿ ಇಲಾಖೆಗೆ ದೂರು ಸಲ್ಲಿಸಿದ್ದಾರೆ.

ಅಭಿಲಾಷ್ ಅವರು ತಮ್ಮ ಅಡಿಕೆ ತೋಟಕ್ಕೆ “ಅಮೃತ್ ಆರ್ಗಾನಿಕ್” ಕಂಪನಿಯ ಶಿಲೀಂಧ್ರನಾಶಕವನ್ನು ಖರೀದಿಸಿ ಸಿಂಪಡಿಸಿದ್ದರು. ಉತ್ಪನ್ನದಲ್ಲಿ ನೈಸರ್ಗಿಕ ಅಂಶಗಳು ಹಾಗೂ ಬೇವು ಎಣ್ಣೆಯ ಮಿಶ್ರಣವಿದೆ ಎಂದು ತಿಳಿಸಲಾಗಿತ್ತು. ಆದರೆ ಔಷಧದ ಪ್ರತಿ ಬಾಟಲಿಯಲ್ಲೂ ವಿಭಿನ್ನ ರೀತಿಯ ಮಿಶ್ರಣ ಕಂಡುಬಂದಿದ್ದು, ಅನುಮಾನ ಮೂಡಿಸಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಔಷಧ ಮಾರಾಟಗಾರರು ಹಾಗೂ ಕಂಪನಿ ಸಿಬ್ಬಂದಿಗೆ ಮಾಹಿತಿ ನೀಡಿದ ಬಳಿಕ ಪರಿಶೀಲನೆ ನಡೆಸಲಾಗಿದ್ದು, ಉತ್ಪನ್ನದಲ್ಲಿ ಬೇವು ಎಣ್ಣೆಯ ಅಂಶ ಇಲ್ಲದಿರುವುದನ್ನು ಕಂಪನಿ ಸಿಬ್ಬಂದಿಯೇ ಒಪ್ಪಿಕೊಂಡಿದ್ದಾರೆ ಎಂದು ಅಭಿಲಾಷ್ ಆರೋಪಿಸಿದ್ದಾರೆ.

ಔಷಧ ಸಿಂಪಡಿಸಿದ ನಂತರ ಅಡಿಕೆ ಗಿಡಗಳ ಎಲೆಗಳು ಒಣಗುವುದು, ಬೆಳೆ ಹಾನಿಯಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದು, ಇದರಿಂದ ತಮಗೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ಸಹಾಯಕ ನಿರ್ದೇಶಕರಿಗೆ ದೂರು ನೀಡಿ, ಉತ್ಪನ್ನದ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಸತ್ಯಾಸತ್ಯತೆ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ದೂರು ಸಲ್ಲಿಸಿದ ಬಳಿಕ ಮಾತನಾಡಿದ ಅಭಿಲಾಷ್, “ಕಂಪನಿ ಸುಳ್ಳು ಮಾಹಿತಿ ನೀಡಿ ಉತ್ಪನ್ನ ಮಾರಾಟ ಮಾಡಿದೆ. ನಾನು ಖರೀದಿಸಿದ 10 ಬಾಟಲಿಗಳಲ್ಲೂ ಮಿಶ್ರಣದ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬಂದಿದೆ. ಇದೇ ಕಂಪನಿಯ ಇತರ ಉತ್ಪನ್ನಗಳ ಗುಣಮಟ್ಟದ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಯಾವುದೇ ರೈತರಿಗೆ ಇಂತಹ ಅನ್ಯಾಯ ಆಗಬಾರದು. ಉತ್ಪನ್ನದ ಮಾದರಿಯನ್ನು ಪರೀಕ್ಷಿಸಿ, ದೋಷ ಕಂಡುಬಂದಲ್ಲಿ ಸಂಬಂಧಪಟ್ಟ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

MEDICINE..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading