
ಹೊಸನಗರ: ರಾಜ್ಯದಲ್ಲಿ ಈಡಿಗರ ಜನಾಂಗ ನೆಮ್ಮದಿ ಜೀವನ ಕಾಣುವಲ್ಲಿ ಹಿರಿಯರಾದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಕಾರಣ ಆಗಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಹೊಸನಗರ ತಾಲ್ಲೂಕು ಆರ್ಯ ಈಡಿಗರ ಸಂಘ, ದೀವರ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆದ ಆರ್ಯ ಈಡಿಗರ ಸಂಘದ ನೂತನ ಸಮುದಾಯ ಭವನ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ಹಿರಿಯ ರಾಜಕೀಯ ಮುತ್ಸದ್ದಿಗಳಾದ ಎಸ್. ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪ ಜನರ ಮಧ್ಯದಲ್ಲಿಯೇ ಬೆಳೆದು ರಾಜಕೀಯ ನೇತಾರರಾದರು. ಸಮಾಜದ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದರು. ಅವರ ಸಮಾಜ ಪರ ಮಾಡಿದ ಹೋರಾಟ ಫಲವಾಗಿ ನಮ್ಮವರು ಸುಖ ಜೀವನ ನಡೆಸುವಂತಾಗಿದೆ ಎಂದರು.
ರಾಜ್ಯದಲ್ಲಿ ಬಡವರ ಆಶಾ ಕಿರಣರಾಗಿದ್ದ ಈ ಹಿರಿಯ ರಾಜಕಾರಣಿಗಳು ನಡೆದು ಬಂದ ಹಾದಿ ದುರ್ಗಮ ಆಗಿದ್ದರೂ ನಮ್ಮ ಸಮಾಜದ ಏಳಿಗೆಗೆ ದುಡಿದಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕಿದೆ ಎಂದರು. ನಮ್ಮ ವಿದ್ಯಾರ್ಥಿಗಳು ಹೆಚ್ಚಿನ ವ್ಯಾಸಂಗ ಮಾಡಿ ಸ್ವಾಭಿಮಾನಿಗಳಾಬೇಕು.
ಬಾಲಕಿಯರ ವಿದ್ಯಾರ್ಥಿ ನಿಲಯ ಬಲುಬೇಗ ನಿರ್ಮಾಣ ಆಗಬೇಕು. ನಮ್ಮ ಕುಟುಂಬದ ಪರವಾಗಿ ರೂ. 25 ಲಕ್ಷ ಹಣ ಕೊಡುತ್ತೇನೆ ಎಂದು ಘೋಷಿಸಿದರು.
ಬಾಲಕಿಯರ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಸಮಾಜದ ಹಿತದೃಷ್ಟಿಯಲ್ಲಿ ಪಕ್ಷಾತೀತವಾಗಿ ಒಂದಾಗಬೇಕು. ಎಲ್ಲರೂ ಸಂಘಟನೆಯಿಂದ ಬಲಯುತವಾಗಬೇಕು. ಸಮಾಜದ ವಿಷಯದಲ್ಲಿ ಒಟ್ಟಾಗಿ ಹೋಗೋಣ ಎಂದರು.
ಜಿಲ್ಲೆಯ ಎಲ್ಲಾ ಸಮಾಜದ ಒಳಿತಿಗಾಗಿ ಅಭಿವೃದ್ಧಿ
ಕಾರ್ಯಗಳಿಗೆ ಅನುದಾನ ಹಣ ನೀಡಿದ್ದಾನೆ. ಸಂಘದ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ಅನುದಾನ ಕೊಡುತ್ತೇನೆ ಎಂದರು.
ಸಮಾರಂಭವನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸಿ ಮಾತನಾಡಿದರು.
ಸಮಸ್ಯೆ ಮುಗಿದಿಲ್ಲ:
ರಾಜ್ಯದಲ್ಲಿ ರೈತರ ಬಗರ್ ಸಮಸ್ಯೆ ದಿನೇ ದಿನೇ ಜಟಿಲವಾಗುತ್ತಿದೆ. ಬಡಪಾಯಿ ರೈತರ ಮೇಲೆ ಅರಣ್ಯ ಅಧಿಕಾರಿಗಳು ಕಾನೂನು ಸಮರ ಹೊಡಿದ್ದಾರೆ. ಅಲ್ಲಲ್ಲಿ ದೌರ್ಜನ್ಯ ನಡೆಯುತ್ತಿದೆ. ತಿಂಗಳೊಳಗೆ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಿದ್ದಾರೆ. ಇಲ್ಲಿನ ಶಾಸಕರು ಮತ್ತು ಸಚಿವರು ರೈತರ ಹಿತ ದೃಷ್ಟಿಯಿಂದ ಸರ್ಕಾರದ ಗಮನ ಸೆಳೆಯಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.
ಗರತಿಕೆರೆ ನಿಟ್ಟೂರು ನಾರಾಯಣಗುರು ಸಂಸ್ಥಾನ ಮಠದ ಶ್ರೀರೇಣುಕಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಆರ್ಯ ಈಡಿಗರ ಸಂಘದ ಅಧ್ಯಕ್ಷ ಬಂಡಿ ರಾಮಚಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘ ನಡೆದು ಬಂದ ಹಾದಿ ಬಗ್ಗೆ ವಿವರಿಸಿದರು.
ಮಾಜಿ ಶಾಸಕ ಡಾ. ಜಿ.ಡಿ. ನಾರಾಯಣಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶ್ವೇತಾ ಬಂಡಿ, ಪ್ರಮುಖರಾದ ಕಲಗೋಡು ರತ್ನಾಕರ್, ಸುರೇಶ್ ಸ್ವಾಮಿರಾವ್, ಪುಟ್ಟಸ್ವಾಮಿ, ಮುರುಳೀಧರ, ಎಂ.ಪಿ. ಸುರೇಶ್, ಹುಲಿಗಾರು ಕೃಷ್ಣಮೂರ್ತಿ ಇದ್ದರು.
ಸಂಘದ ಉಪಾಧ್ಯಕ್ಷ ಎರಗಿ ಉಮೇಶ್ ಸ್ವಾಗತಿಸಿದರು. ಶಿಕ್ಷಕ ಪ್ರದೀಪ್ ಹಾಗೂ ಸುರೇಖಾ ನಿರೂಪಿಸಿದರು.
INAUGURATION..
