
ರಿಪ್ಪನ್ಪೇಟೆ :ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸುಸಂಸ್ಕೃತ ಸಮಾಜ ಮತ್ತು ಸದೃಢ ರಾಷ್ಟ್ರವನ್ನು ನಿರ್ಮಿಸಬಹುದು. ಉದ್ಯೋಗ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ನೀಡಿರುವ ಮೀಸಲಾತಿಯ ಸದುಪಯೋಗ ಪಡೆದು, ಸಮಾಜದ ಮುಖ್ಯವಾಹಿನಿಗೆ ಬರಬೇಕು” ಎಂದು ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬೇಳೂರು ಗೋಪಾಲಕೃಷ್ಣ ಹೇಳಿದರು.
ರಿಪ್ಪನ್ಪೇಟೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿ ವತಿಯಿಂದ ನಡೆದ ಈದ್ ಮಿಲಾದ್ ಸೌಹಾರ್ಧ ಸಂಗಮವನ್ನು ಉದ್ದೇಶಿಸಿ ಮಾತನಾಡಿದ ಅವರು –
“ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರಿಂದ ಮುಸ್ಲಿಂ ಸಮುದಾಯದ ಮಕ್ಕಳು ಕೇವಲ ಸಣ್ಣ ಪುಟ್ಟ ವ್ಯಾಪಾರಕ್ಕೆ ಸೀಮಿತವಾಗದೆ, ಯುಪಿಎಸ್ ಮತ್ತು ಕೆಪಿಎಸ್ ಪರೀಕ್ಷೆಗಳನ್ನು ಬರೆದು ಉತ್ತೀರಣರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜದಲ್ಲಿ ಬದಲಾವಣೆ ತರಬೇಕು. ನಾವು ಎಲ್ಲರೂ ಭಾರತೀಯರು, ಪರಸ್ಪರ ಗೌರವದಿಂದ ಬದುಕುವುದು ರಾಷ್ಟ್ರದ ಶಕ್ತಿಯನ್ನು ಹೆಚ್ಚಿಸುತ್ತದೆ” ಎಂದರು.
ವಕ್ಫ಼್ ಕೌನ್ಸಿಲ್ ರಾಜ್ಯ ಉಪಾಧ್ಯಕ್ಷ ಶಾಫ಼ಿ ಸ ಅಸದಿ ಮಾತನಾಡಿ ಪ್ರಪಂಚದ ಯಾವ ಧರ್ಮವು ಸಹ ಹಿಂಸೆಯನ್ನ ಸಹಿಸುವುದಿಲ್ಲ, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಜೈನ ಪಾರ್ಷಿ ಸೇರಿದಂತೆ ಜಗತ್ತಿನ ಎಲ್ಲಾ ಧರ್ಮಗಳ ಮೂಲ ಉದ್ದೇಶ ಸಮಾಜದಲ್ಲಿ ಶಾಂತಿ ಸಹ ಬಾಳ್ವೆ ಯಿಂದ ಬದುಕುವುದು ಧರ್ಮದ ಹೆಸರಿನಲ್ಲಿ ನಡೆಯುವ ಗಲಭೆಯಿಂದ ಯಾವುದೇ ಧರ್ಮ ಉದ್ದಾರವಾಗುವುದಿಲ್ಲ ಎಂದರು
ಉದ್ಯಮಿ ಮಹೇಂದ್ರ ಎಂ ಮಾತನಾಡಿ ಧರ್ಮಗುರುಗಳ ತತ್ವ ಸಿದ್ಧಾಂತಗಳನ್ನು ಅನುಸರಿಸಿ ಸೌಹಾರ್ಧಮಯ ಸಮಾಜ ಕಟ್ಟೋಣ ಎಂದರು
ಕೆಡಿಪಿ ಸದಸ್ಯ ಆಸೀಫ಼್ ಭಾಷಾ ಪ್ರಾಸ್ತವಿಕವಾಗಿ ಮಾತನಾಡಿ ನಮ್ಮ ಸಮುದಾಯವು ಶೈಕ್ಷಣಿಕ ,ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ದಿ ಹೊಂದುತಿದ್ದು ಈ ಭಾಗದ ಅನೇಕ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಫಲಿತಾಂಶ ತರುತಿದ್ದು ,ಕ್ರೀಡಾ ಕ್ಷೇತ್ರದಲ್ಲೂ ಸಮುದಾಯದ ಯುವಕರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರು ತಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಶೈಕ್ಷಣಿಕ-ಸಾಮಾಜಿಕ-ಆರ್ಥಿಕವಾಗಿ ಮುಸ್ಲಿಂ ಸಮುದಾಯ ಪ್ರಗತಿ ಸಾಧಿಸುತ್ತಿದೆ. ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಅನುದಾನ ಮಂಜೂರು ಮಾಡಿದದ್ದು ಹೆಮ್ಮೆಯ ಸಂಗತಿ ಎಂದರು.
ಸಮುದಾಯ ಭವನಕ್ಕೆ ದೇಣಿಗೆ
ಕಾರ್ಯಕ್ರಮದ ವೇದಿಕೆಯಲ್ಲಿ ಉದ್ಯಮಿ ಮಹೇಂದ್ರ ಎಂ ಸಮುದಾಯ ಭವನ ನಿರ್ಮಾಣಕ್ಕಾಗಿ ₹15 ಲಕ್ಷ ರೂ. ಚೆಕ್ ಹಸ್ತಾಂತರಿಸಿದರು.
ವಿದ್ಯಾರ್ಥಿಗಳಿಗೆ ಸನ್ಮಾನ
ಈ ಸಂದರ್ಭದಲ್ಲಿ SSLC ಮತ್ತು PUC ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಜೊತೆಗೆ ರಾಷ್ಟ್ರಮಟ್ಟದ ಕರಾಟೆ ಪ್ರಶಸ್ತಿ ವಿಜೇತರಿಗೂ ಸನ್ಮಾನ ಮಾಡಲಾಯಿತು.
ಮೊಹಿಯುದ್ದೀನ್ ಜುಮ್ಮಾ ಮಸೀದಿ
ಅಧ್ಯಕ್ಷರಾದ ಹಸನಬ್ಬ ಬಾವಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಧರ್ಮಗುರು ಮುನೀರ್ ಸಖಾಫಿ, ಈದ್ ಮಿಲಾದ್ ಸಮಿತಿ ಅಧ್ಯಕ್ಷ ಅಫ಼್ಜಲ್ ಬ್ಯಾರಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅರ್ ಎ ಚಾಬುಸಾಬ್, ತೀರ್ಥಹಳ್ಳಿ ಪಪಂ ಮಾಜಿ ಅಧ್ಯಕ್ಷ ರಹಮತುಲ್ಲಾ ಅಸಾದಿ, ಜಿಪಂ ಮಾಜಿ ಸದಸ್ಯ ಬಿ.ಪಿ. ರಾಮಚಂದ್ರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
RIPPONPET NEWS..
