
ಹೊಸನಗರ: ರೈತರಿಗೆ ಭೂ ಹಕ್ಕು ಮಂಜೂರು ಮಾಡುವಲ್ಲಿ ಅಧಿಕಾರಿಗಳು ಶಕ್ತಿಮೀರಿ ಕೆಲಸಮಾಡಬೇಕು. ಅರ್ಹ ಅರ್ಜಿದಾರರಿಗೆ ಸೂಕ್ತ ನ್ಯಾಯ ಲಭಿಸಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಬಗರ್ ಹುಕ್ಕುಂ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಮಾತನಾಡಿದರು.
ಅರ್ಜಿದಾರರ ಅರ್ಜಿ ವಿಲೇವಾರಿ ಮಾಡುವಲ್ಲಿ ಕಂದಾಯ ಇಲಾಖೆ ಅರಣ್ಯ ಇಲಾಖೆ ಅಧಿಕಾರಿಗಳು ಸಭೆ ಸೇರಿ ಇತ್ಯರ್ಥ ಗೊಳಿಸಬೇಕು. ನಂತರ ಬಗರ್ ಹುಕುಂ ಸಭೆ ನಡೆಸಿ ಹಕ್ಕುಪತ್ರ ಕೊಡುವ ಕೆಲಸ ಮಾಡೋಣ ಎಂದರು.
ರೈತರ ಜಮೀನು ವಿಚಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅನಗತ್ಯ ತೊಂದರೆ ನೀಡುವ ಪರಿಪಾಠ ಹೆಚ್ಚಾಗುತ್ತಿದೆ. ಅಧಿಕಾರಿಗಳ ಕಿರಿಕಿರಿಯಿಂದ ರೈತರು ಬೇಸತ್ತಿದ್ದಾರೆ.
ಅವರಿಗೂ ಬದುಕುವ ಹಕ್ಕು ಇದೆ. ಅನಗತ್ಯ ತೊಂದರೆ ನೀಡಿದ್ದೇ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ರೈತರ ಬಗರ್ ಹುಕುಂ ವಿಚಾರದಲ್ಲಿ
ಇಂದು ಕಾನೂನು ಬಿಗಿಯಾಗಿದೆ.
ಸುಲಭದಲ್ಲಿ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ. ಎಲ್ಲಾ ಸಮಸ್ಯೆ ನೀಗಿಸಿ ರೈತರಿಗೆ ಹಕ್ಕು ಕೊಡಬೇಕಾಗಿದೆ. ರೈತರ ಸಮಸ್ಯೆ ಅರಿತಿರುವ ಸರ್ಕಾರ ಅಗತ್ಯ ಕ್ರಮ ಕೈಗೊಂಡು ಹಂತ ಹಂತವಾಗಿ ಹಕ್ಕು ನೀಡಲು ನಿರ್ಧರಿಸಿದೆ.
ಮುಂದಿನ ಸಭೆಯಲ್ಲಿ ಅಧಿಕಾರಿಗಳಿಗಳು ಸೂಕ್ತ ಮಾಹಿತಿ ತರಬೇಕು. ಅಗತ್ಯ ಕ್ರಮ ಕೈಗೊಂಡು ಅರ್ಜಿ ವಿಲೇವಾರಿ ಮಾಡಬೇಕು ಎಂದರು.
ಸಭೆಯಲ್ಲಿ ಬಗರ್ ಹುಕುಂ ಸಮಿತಿ ಸದಸ್ಯರಾದ ಜ್ಯೋತಿ ಚಂದ್ರಮೌಳಿ, ಸಾಕಮ್ಮ, ಸ್ವಾಮಿ ನೇರಲೆ, ತಹಸೀಲ್ದಾರ್ ರಶ್ಮಿ ಹಾಲೇಶ್, ಮಂಜು ಸಣ್ಣಕ್ಕಿ ಇದ್ದರು.
LAND RIGHTS...
