
ಹೊಸನಗರ:ದಿ 14.09.2026 ರಿಂದ 28.09.2026 ವರೆಗೆ ಒಟ್ಟು 15 ದಿನಗಳ ಕಾಲ ಹೊಸನಗರ ಪಟ್ಟಣದ ವೀರ ಸಾವರ್ಕರ್ ಮಂಟಪದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ಎಂಟನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವಕ್ಕೆ ಸರ್ವ ರೀತಿಯಿಂದಲೂ ಸಿದ್ಧತೆ ಪೂರ್ಣಗೊಂಡಿದೆ ಎಂದು ಸಮಿತಿಯ ಗೌರವ ಸಂಚಾಲಕರಾದ
ಶ್ರೀ ವಿನಾಯಕ ಶ್ರೇಷ್ಠಿಯವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶನಿವಾರ ಈ ಕುರಿತಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶುಕ್ಲ ಚೌತಿಯಂದು ಪ್ರತಿಷ್ಠಾಪನಾ ಶೋಭಾಯಾತ್ರೆಯಿಂದ ಆರಂಭಗೊಂಡು ಸೆಪ್ಟೆಂಬರ್ 28 ರ ಬೃಹತ್ ವಿಸರ್ಜನಾ ಶೋಭಾಯಾತ್ರೆಯಾದ ಹಿಂದು ದಿಗ್ವಿಜಯ ಯಾತ್ರೆಯೊಂದಿಗೆ ಈ ಬಾರಿಯ ಉತ್ಸವ ಸಂಪನ್ನಗೊಳ್ಳಲಿದೆ ಎಂದರು.
ಸುಮಾರು ಇಪ್ಪತ್ತೊಂದು ಭಜನಾ ಮಂಡಳಿಗಳು ನಿಗದಿಯಾದ ದಿನದಂದು ಭಜನೆ ಸೇವೆ, ಎರಡು ಭರತನಾಟ್ಯ ಕಾರ್ಯಕ್ರಮ, ಒಂದು ಗಮಕ ಕಾರ್ಯಕ್ರಮ, ಕೆರೋಕೆ ಸಂಗೀತ ಸಂಜೆ ಮತ್ತು ವಿಶ್ವದ ಶಾಂತಿ-ಕಲ್ಯಾಣಕ್ಕಾಗಿ, ಸಂಘಟಿತ-ಸಮರಸ ಹಿಂದು ಸಮಾಜದ ನಿರ್ಮಾಣಕ್ಕಾಗಿ ಮತ್ತು ಹೊಸನಗರ ವಿಧಾನಸಭಾ ಕ್ಷೇತ್ರ ಮರು ಅಸ್ತಿತ್ವಕ್ಕಾಗಿ ಸಂಕಲ್ಪಿಸಿ ಗಣಹೋಮ, ಶ್ರೀಸತ್ಯನಾರಾಯಣ ಪೂಜೆ ಮತ್ತು ಮಹಾ ಅನ್ನಸಂತರ್ಪಣೆಯಂತಹ ಧಾರ್ಮಿಕ- ಸಾಂಸ್ಕೃತಿಕ-ಸಾಮಾಜಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದು ಪ್ರಧಾನ ಸಂಚಾಲಕರಾದ
ಗಣೇಶ್ ಮಧುಕರ್ ಅವರು ಮಾಹಿತಿ ನೀಡಿದರು.
ಅಲ್ಲದೆ, ಚೆಸ್ ಸ್ಪರ್ಧೆ, ವಿಜ್ಞಾನ ಮೇಳ ಪ್ರದರ್ಶನ ಮತ್ತು ಸ್ಪರ್ಧೆ, ತಾಯಂದಿರು ಮತ್ತು ಹತ್ತು ವರ್ಷದ ಒಳಗಿನ ಮಕ್ಕಳಿಗಾಗಿ ಯಶೋಧಾ-ಕೃಷ್ಣ ಛದ್ಮವೇಶ ಸ್ಪರ್ಧೆ, ಚರ್ಚಾ ಸ್ಪರ್ಧೆ ಮತ್ತು ಕರಾಟೆ ಪ್ರದರ್ಶನ ಮತ್ತು ಸ್ಪರ್ಧೆಗಳು ನಡೆಯಲಿವೆ ಎಂದು ಸಾಂಸ್ಕೃತಿಕ ಪ್ರಭಾರಿ
ಮಂಜುನಾಥ್ ಪೂಜಾರಿಯವರು ಮಾಹಿತಿ ನೀಡಿದರು.
ಕಾರ್ಯಸಂಚಾಲಕರಾದ
ಅನೂಪ ಅರವಿಂದ್ ಮಾತನಾಡಿ ಸಮಿತಿಯು ನಡೆಸುವ ಎಲ್ಲಾ ಸ್ಪರ್ಧೆ ಮತ್ತು ವಿವಿಧ ಕಾರ್ಯಕ್ರಮಗಳಿಗೆ ಸಮಾಜದ ಸಜ್ಜನ ಬಂಧುಗಳು, ಮಾತಾ ಭಗಿನಿಯರು ಕುಟುಂಬ ಸಹಿತರಾಗಿ ಆಗಮಿಸಿ ಸಮಿತಿಯ ಉತ್ಸವವನ್ನು ಹೆಚ್ಚಿಸಲು ಎಲ್ಲರಿಗೂ ಸುದ್ದಿಗೋಷ್ಠಿಯ ಮೂಲಕ ಆಮಂತ್ರಣ ನೀಡಿದರು.
ಈ ಸುದ್ದಿಗೋಷ್ಠಿಯ ಸಮಿತಿಯ ಪೂರ್ವ ಗೌರವ ಸಂಚಾಲಕರು, ಪ್ರಧಾನ ಸಂಚಾಲಕರು, ಕಾರ್ಯ ಸಂಚಾಲಕರು, ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತತರಿದ್ದರು.
H M S.
Discover more from Prasarana news
Subscribe to get the latest posts sent to your email.
