
ಹೊಸನಗರ: ನಿರಂತರ ದುಡಿಮೆಯಿಂದ ದಣಿದ ಕಾರ್ಮಿಕ ಜೀವಕ್ಕೆ ಮದ್ಯ, ನೋವು ಮರೆಸುವ 'ಟಾನಿಕ್' ಎಂಬುದು ಸಾರ್ವಜನಿಕ ವಲಯದ ಜನಜನನಿತ ನುಡಿ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಮದ್ಯದಂಗಡಿ ಮಾಲೀಕರು ತಾಲೂಕಿನ ಕೆಲವು ಗ್ರಾಮಗಳ ದಿನಸಿ ಆಂಗಡಿಗಳಿಗೆ ತಾವೇ ಖುದ್ದಾಗಿ ಓರ್ವ ವ್ಯಕ್ತಿಯನ್ನು ನಿಯೋಜನೆ ಮಾಡುವ ಮೂಲಕ ಅಕ್ರಮ ಮದ್ಯ ಮಾರಾಟಕ್ಕೆ ಮುಂದಾಗಿದ್ದಾರೆ. ಇದು ಗ್ರಾಮಸ್ಥರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕುಟುಂಬವು ಆರ್ಥಿಕ ಹಾಗು ಸಾಮಾಜಿಕವಾಗಿ ದುಸ್ತಿಗೆ ತಲುಪಲು ಇದು ಕಾರಣವಾಗಿದೆ. ಇಂತಹ ಅಕ್ರಮ ಮದ್ಯ ಸರಬರಾಜು ಹಾಗು ಮಾರಾಟವನ್ನು ತಡೆಯುವಂತೆ ತಾಲೂಕಿನ ಕೆಲವು ಪ್ರಜ್ಞಾವಂತ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರತಿಷ್ಠಿತ ಕಂಪನಿಗಳ ಮದ್ಯದ ಬಾಟಲ್ ಗಳಿಗೆ ಅಗ್ಗದ ಮದ್ಯ ಬೆರೆಸಿ ಮಾರಾಟ ಮಾಡುವ ದಂಧೆ ತಾಲೂಕಿನಲ್ಲಿ ಈ ಹಿಂದಿನಿಂದಲೂ ನಿರಂತರವಾಗಿ ನಡೆಯುತ್ತಲೇ ಇದೆ. ಹರಿದ್ರಾವತಿ, ಮಳವಳ್ಳಿ, ಬಟ್ಟೆಮಲ್ಲಪ್ಪ, ಸುತ್ತ, ವಾರಂಬಳ್ಳಿ, ಜಕ್ಕನಗದ್ದೆ, ಮುಂಬಾರು, ಹುಂಚ ರೋಡ್ ಸೇರಿದಂತೆ ಹಲವೆಡೆ ಅಕ್ರಮ ಮದ್ಯ ಸಾಗಾಟ ಹಾಗೂ ಮಾರಾಟ ನಿರಂತರವಾಗಿದೆ. ಮದ್ಯದ ಅಂಗಡಿಗಳ ಮಾಲೀಕರೇ ಬೈಕ್ ಮೂಲಕ ಗಂಟೆ, ಗಂಟೆಗೆ ಅನುಗುಣವಾಗಿ ಮದ್ಯವನ್ನು ಅಕ್ರಮವಾಗಿ ಸರಬರಾಜು ಮಾಡುತ್ತಿರುವ ದೂರು ಕೇಳಿ ಬಂದಿದೆ. ತಾಲೂಕಿನ ಕಿರಾಣಿ ಅಂಗಡಿ, ಹೋಟೆಲ್ ಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆದಿದ್ದರೂ ಅಬಕಾರಿ ಇಲಾಖೆ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ. ಅಕ್ರಮ ದಂಧೆ ಕುರಿತು ಇಲಾಖೆ ಸಿಬ್ಬಂದಿಗಳಿಗೆ ಸ್ಪಷ್ಟ ಮಾಹಿತಿ ಇದ್ದರೂ, ವೆಂಡರ್ ನೀಡುವ ಮಾಮೂಲಿ ಹಣಕ್ಕೆ ಇಲಾಖೆಯ ಸಿಬ್ಬಂದಿಗಳ ದಾಳಿ ಮಾಹಿತಿಯನ್ನು ಮೊದಲೇ ದಂಧೆ ಕೋರರಿಗೆ ತಿಳಿಸುವುದು ದಾಳಿಯ ಮಹತ್ವ ಕಳೆದುಕೊಳ್ಳುವಂತಾಗಿದೆ. ಬೆಳಗ್ಗೆ ಆರೇಳು ಗಂಟೆಗೆ ತೆರೆಯುವ ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯಮಾರಾಟ ತಾಲೂಕಿನಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಎಂಬ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಈ ಕುರಿತು ಅಬಕಾರಿ ಹಾಗೂ ಪೊಲೀಸ್ ಇಲಾಖೆ ಅಕ್ರಮ ಮಾರಾಟ ಹಾಗು ಸರಬರಾಜು ತಡೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಜನತೆ ಒತ್ತಾಯಿಸಿದ್ಧಾರೆ.
ILEGAL LIQUOR..
Discover more from Prasarana news
Subscribe to get the latest posts sent to your email.
