
ಬೆಂಗಳೂರು: ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ 6 ಮಂದಿ ನಕ್ಸಲರು ಬುಧವಾರ ಶರಣಾಗತ ರಾಗಿದ್ದಾರೆ. ಈ ಮೂಲಕ ಶಸ್ತ್ರಾಸ್ತ್ರ ಹೋರಾಟಕ್ಕೆ ಅಂತ್ಯ ಹಾಡಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಾರ್ಯಾಚರಿಸಿ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ 6 ಮಂದಿ ನಕ್ಸಲರಾದ ಚಿಕ್ಕಮಗಳೂರು ಜಿಲ್ಲೆಯ ಲತಾ ಮುಂಡಗಾರು, ದಕ್ಷಿಣ ಕನ್ನಡ ಜಿಲ್ಲೆಯ ಸುಂದರಿ ಕುತ್ಲೂರು, ಚಿಕ್ಕಮಗಳೂರಿನ ವನಜಾಕ್ಷಿ ಬಾಳೆಹೊಳೆ, ರಾಯಚೂರಿನ ಮಾರೆಪ್ಪ ಅರೋಲಿ, ಕೇರಳ ವಯನಾಡಿನ ಜಿಶಾ, ತಮಿಳುನಾಡು ವೆಲ್ಲೂರಿನ ಕೆ. ವಸಂತ್ ಬುಧವಾರ ಬೆಳಗ್ಗೆ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಶರಣಾಗುವುದಾಗಿ ಹೇಳಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಹಂತದ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದರು..

ಇತರ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಯಲ್ಲಿರುವವರೂ ಮುಖ್ಯವಾಹಿನಿಗೆ ಬರಬಹುದು ಎಂಬ ಸದುದ್ದೇಶದಿಂದ ಕಡೇ ಕ್ಷಣದಲ್ಲಿ ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಬಂದು ಶರಣಾಗಲು ಜಿಲ್ಲಾಧಿಕಾರಿ ಹಾಗೂ ಪೊಲೀಸರು ನಕ್ಸಲರ ಜತೆಗೆ ಚರ್ಚೆ ನಡೆಸಿ ಬಳಿಕ ಅವರನ್ನು ಚಿಕ್ಕಮಗಳೂರಿನಿಂದ ಹಾಸನ ಮಾರ್ಗವಾಗಿ ಸಂಜೆ 6 ಗಂಟೆಗೆ ಸಿಎಂ ಗೃಹ ಕಚೇರಿಗೆ ಕರೆತಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹಸಚಿವ ಡಾಣ ಜಿ. ಪರಮೇಶ್ವರ್ ಸೇರಿದಂತೆ ಕೆಲವು ಸಚಿವರ ಸಮ್ಮುಖದಲ್ಲಿ 6 ನಕ್ಸಲರು ಶರಣಾದರು. ಈ ಶರಣಾಗತಿಯಿಂದ 4 ದಶಕಗಳ ಬಳಿಕ ಕರ್ನಾಟಕ ನಕ್ಸಲ್ ಮುಕ್ತ ಆಗುವ ಮುನ್ನುಡಿ ಬರೆದಿದೆ .
NAXALITE:SURRENDER
