

ಹೊಸನಗರ: ತಾಲ್ಲೂಕಿನ ಕೃಷಿ ಪರಿಕರ ಮಾರಾಟಗಾರರಿಗೆ ಇಂದು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಒಂದು ದಿನದ ತರಬೇತಿ ಕಾರ್ಯಗಾರ ನಡೆಸಲಾಯಿತು. ಈ ಕಾರ್ಯಗಾರದಲ್ಲಿ, ಶ್ರೀ ಸಚಿನ್ ಹೆಗಡೆ, ಸಹಾಯಕ ಕೃಷಿ ನಿರ್ದೇಶಕರು ಹೊಸನಗರ ಹಾಗೂ ಶ್ರೀ ಶಶಿಧರ್, ಸಹಾಯಕ ಕೃಷಿ ನಿರ್ದೇಶಕರು, ಜಾರಿದಳ, ಶಿವಮೊಗ್ಗ ಇವರು ತರಬೇತಿಯನ್ನು ನೀಡಿದರು.
ತಾಲೂಕಿನ ರಸಗೊಬ್ಬರ, ಕೀಟನಾಶಕ ಹಾಗೂ ಬಿತ್ತನೆ ಬೀಜ ಮಾರಾಟಗಾರರಿಗೆ ಮುಂದಿನ ಮುಂಗಾರು ಹಂಗಾಮಿನ ಸಿದ್ಧತೆಗೆ ಸಂಬಂಧಿಸಿದಂತೆ, ಅಗತ್ಯ ತರಬೇತಿಯನ್ನು ನೀಡಲಾಯಿತು. ಕೃಷಿ ಪರಿಕರಗಳ ಕಾನೂನುಗಳು ಉಲ್ಲಂಘನೆ ಯಾಗದಂತೆ ಹಾಗೂ ರೈತರಿಗೆ ಯಾವುದೇ ತೊಂದರೆ ಆಗದಂತೆ ಕೃಷಿ ಪರಿಕರಗಳನ್ನು ಹೇಗೆ ಮಾರಾಟ ಮಾಡಬೇಕು? ರೈತರಲ್ಲಿ ಅಗತ್ಯಕ್ಕೆ ತಕ್ಕಂತೆ ಕಳೆನಾಶಕ ಹಾಗೂ ಸುರಕ್ಷಿತ ಕೀಟನಾಶಕದ ಬಳಕೆಯ ಕುರಿತು ಅರಿವು ಮೂಡಿಸುವುದು ಹೇಗೆ? ಅಲ್ಲದೆ ಹೆಚ್ಚಿನ ಲಾಭದಾಸೆಗೆ ಬಿದ್ದು ಕಳಪೆ ರಸಗೊಬ್ಬರ ಹಾಗೂ ಕಿಟನಾಶಗಳನ್ನು ಮಾರಾಟ ಮಾಡಿದಲ್ಲಿ, ಕಾನೂನುಗಳ ಉಲ್ಲಂಘನೆಯಾದಲ್ಲಿ ಕೃಷಿ ಇಲಾಖೆಯ ಮಾರಾಟಗಾರರ ಮೇಲೆ ಹಾಗೂ ಉತ್ಪಾದಕರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳಲಿದೆ? ಏನೇನು ಶಿಕ್ಷೆಗಳು ಇರಲಿವೆ? ಎಂಬ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು.
ಶ್ರೀ ಸುಶಾಂತ್, ಕೃಷಿ ಅಧಿಕಾರಿ, ರಿಪ್ಪನ್ ಪೇಟೆ ಹಾಗೂ ಇತರ ಅಧಿಕಾರಿಗಳು ಕಾರ್ಯಗಾರದಲ್ಲಿ ಹಾಜರಿದ್ದರು.
ಕಾರ್ಯಗಾರದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಸಚಿನ್ ಹೆಗಡೆ, ಸಹಾಯಕ ಕೃಷಿ ನಿರ್ದೇಶಕರು, ಹೊಸನಗರ,
ತಾಲ್ಲೂಕಿನಲ್ಲಿ ಈಗಾಗಲೇ ಪೂರ್ವ ಮುಂಗಾರು ಮಳೆಗಳು ಆರಂಭವಾಗಿದ್ದು, ರೈತರು ಮುಂಗಾರಿಗೆ ಭೂಮಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕೃಷಿ ಇಲಾಖೆಯೂ ಕೂಡ ಮುಂಗಾರು ಹಂಗಾಮಿಗೆ ಸಜ್ಜಾಗಿದ್ದು, ಹಂಗಾಮಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇತರೆ ಪರಿಕರಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಬಾರಿ ಏಪ್ರಿಲ್ ತಿಂಗಳ ವರೆಗೆ, ತಾಲ್ಲೂಕಿನಲ್ಲಿ ವಾಡಿಕೆ 40ಮಿ. ಮೀ. ಗಿಂತ ಶೇ. 70 ಹೆಚ್ಚು ಅಂದರೆ, 70 ಮಿ. ಮೀ. ಮಳೆಯಾಗಿದ್ದು, ಉತ್ತಮ ಮುಂಗಾರು ಮಳೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಸೂಕ್ತವಾಗಿ ಲೈಸೆನ್ಸ್ ಪಡೆಯದೇ, ದಿನಸಿ ಅಂಗಡಿಗಳಲ್ಲಿ ಹಾಗೂ ಹಾರ್ಡ್ವೇರ್ ಅಂಗಡಿಗಳಲ್ಲಿ ಮೈಲುತುತ್ತ ಹಾಗು ಸುಣ್ಣವನ್ನು ಮಾರಾಟ ಮಾಡುತ್ತಿದ್ದು, ಇದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಅಲ್ಲದೆ ಪಿಕಪ್ ವಾಹನಗಳಲ್ಲಿ ತೆಗೆದುಕೊಂಡು ಬಂದು, ಮೈಲುತುತ್ತ ಮಾರಾಟ ಮಾಡುತ್ತಿರುವ ಪ್ರಸಂಗಗಳೂ ವರದಿಯಾಗಿದ್ದು, ಇವರ ಮೇಲೆ ಕೃಷಿ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ರೈತರು ಸಹ ಎಚ್ಚರಿಕೆಯಿಂದ ಲೈಸೆನ್ಸ್ ಪಡೆದ ಅಂಗಡಿಗಳಿಂದಲೇ ಉತ್ತಮ ಗುಣಮಟ್ಟದ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಪಡೆದು ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಬೇಕೆಂದು ಸಲಹೆ ನೀಡಿದರು. ಎಚ್ಚರಿಕೆ ಪ್ರಕಟಣೆಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
KRUSHI PARIKARA